Friday, August 21, 2020

ಭಾವಗಳೂ ಪುಳಕಗೊಳ್ಳುತ್ತವೆ..!

ನನ್ನ ಪ್ರಾಥಮಿಕ ಶಾಲೆಯ ಮುಖ್ಯಗುರು ನೇಮಿಚಂದ್ರ ದಿಬ್ಬದ್. (Nemichandra Dibbad) ಪೆರಾಜೆಯ ಕುಂಬಳಚೇರಿ ಸರಕಾರಿ ಶಾಲೆಯಲ್ಲಿ ಮುಖ್ಯ ಗುರುವಾಗಿ ವೃತ್ತಿ ಆರಂಭಿಸಿದವರು. ನಾಲ್ಕು ವರುಷ ಸೇವೆಯಲ್ಲಿದ್ದರು. ನಾನು ಐದರಿಂದ ಏಳನೇ ತರಗತಿಯ ತನಕ (1975-77) ಓದಿದ ಶಾಲೆ. ನಲವತ್ತೈದು ವರುಷದ ಹಿಂದೆ!

ನಿನ್ನೆ (20-8-2020) ಮಧ್ಯಾಹ್ನ ಎರಡೂಕಾಲು ಗಂಟೆ. ಅತ್ತ ಧಾರವಾಡದಿಂದ ದಿಬ್ಬದ್ ಗುರುಗಳ ಕರೆ. ಅವರಾಗಿಯೇ ತನ್ನ ಪರಿಚಯ ಹೇಳಿದಾಗ ಶಾಲಾ ದಿನಗಳತ್ತ ಮನಸ್ಸು ಓಡಿತು. ಕ್ಷಣದ ಖುಷಿಗೆ ಮಾತು ಕೊಡಲು ಈಗ ಕಷ್ಟವಾಗುತ್ತಿದೆ!

 ತನ್ನ ಕುಟುಂಬದ ಮಾಹಿತಿ ನೀಡಿದರು. ನನ್ನ ಕುಟುಂಬವನ್ನು ವಿಚಾರಿಸಿದರು. “ನಾನು ಮೊದಲು ಡ್ಯೂಟಿ ಮಾಡಿದ ಶಾಲೆಯು ಈಗಲೂ ನೆನಪಾಗುತ್ತದೆ. ಅಲ್ಲಿನ ಪರಿಸರ, ಆಗಿನ ಬೌದ್ಧಿಕ ಗಟ್ಟಿತನ, ಹಳ್ಳಿಯ ಮಕ್ಕಳು, ಸಹೃದಯಿ ಊರಿನ ಗಣ್ಯರು.. ಇವರನ್ನೆಲ್ಲಾ ಹೇಗೆ ಮರೆಯಲಿ,” ಎನ್ನುತ್ತಾ, ‘ಈಗ ಧಾರವಾಡದಲ್ಲಿದ್ದೇನೆ. ಮನೆಗೆ ಬನ್ನಿ,’ ಆಹ್ವಾನಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ನೆನಪಿಗಾಗಿ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದ್ದುವು. ಅದರಲ್ಲೊಂದು 'ಭಾಗ್ಯದ ಬಾಗಿಲು'. ನನಗೆ ಆ ಪುಸ್ತಕವನ್ನು ಬರೆಯುವ ಅವಕಾಶ ಪ್ರಾಪ್ತವಾಗಿತ್ತು. ಅದರಲ್ಲಿ ಕೃತಿಕಾರನ ಪರಿಚಯವಿತ್ತು. ಪರಿಚಯದ ಜಾಡನ್ನರಿಸಿ, ಉಜಿರೆಯ ಡಾ.ಶ್ರೀನಾಥರಿಂದ ದೂರವಾಣಿ ಸಂಖ್ಯೆ ಪಡೆದು ಫೋನಿಸಿದ ಗುರುಗಳಿಗೆ ಶರಣು.

ದಿವಸ - ಅಸ್ಪಷ್ಟ ನೆನಪು... ಬಹುಶಃ ಆರನೇ ತರಗತಿಯಲ್ಲಿದ್ದೆ. ಐದೋ, ಆರೋ ವರುಷದವನಾಗಿರುವಾಗ ಅಂಟಿದ 'ಉಗ್ಗು' ನನ್ನ ಮಾತನ್ನು ಕಸಿದುಕೊಂಡಿತ್ತು. ವಿಚಾರ ಅಂದು ಗುರುಗಳಿಗೆ ತಿಳಿದಿರಲಿಲ್ಲ. ಪ್ರಶ್ನೆಯೊಂದಕ್ಕೆ ಉತ್ತರಿಸಲು ಮಾತು ಕೈಕೊಟ್ಟಾಗ ಬೆನ್ನಿನಲ್ಲಿ ಗುರುಗಳ ಬೆತ್ತ ಮಾತನಾಡಿತ್ತು! ಪ್ರಶ್ನೆಗೆ ಉತ್ತರ ಗೊತ್ತಿತ್ತು... ಸಂವಹನ ಮಾಡಲು ಸಾಧ್ಯವಾಗಿರಲಿಲ್ಲ. ಬೆತ್ತದ ನೋವು ತಂದ ಕಣ್ಣೀರಿನ ಹಿಂದಿನ ಸತ್ಯಕ್ಕೆ ಮೌನದಳಗೆ ರೋದನ.

 ಒಂದೆಡೆ ಸಹಪಾಠಿಗಳ ಪರಿಹಾಸ್ಯ, ಬಂಧುವರ್ಗದವರ ಅನಾದರ, ಕಣ್ಣೆದುರೇ ವ್ಯಂಗ್ಯ ಭಾವಗಳು, ಟೀಕೆಗಳು.. ಅಬ್ಬಾ... ಎಣಿಸಿದಾಗ ಕಣ್ಣಾಲಿ ಆದ್ರ್ರವಾಗುತ್ತದೆ. ತಿಂಗಳೊಳಗೆ ಅವರಿಗೂ ಉಗ್ಗಿನ ವಿಚಾರ ತಿಳಿಯಿತು. ತನ್ನ ಛೇಂಬರಿಗೆ ಕರೆಸಿಕೊಂಡರು. ಸಮಾಧಾನ ಹೇಳಿದ್ದರು. ನಮ್ಮ ಮನೆಗೂ ಬಂದು ಸಾಂತ್ವನ ಹೇಳಿದ್ದರು. 'ತನಗೆ ಗೊತ್ತಿಲ್ಲದೆ ಬೆತ್ತ ಪ್ರಹಾರ ಮಾಡಿದೆ' ಎಂದೂ ಮಾತು ಸೇರಿಸಿದ್ದರು.

 ಆರನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ತರಗತಿಗೆ ದ್ವಿತೀಯನಾಗಿ ಅಂಕ ಪಡೆದಿದ್ದೆ. ಮುಂದಿನ ವಾರ್ಶಿಕೋತ್ಸವದ (ಸ್ಕೂಲ್ ಡೇ) ವೇದಿಕೆಯಲ್ಲಿ ಬಹುಮಾನ ಪಡೆಯುತ್ತಿರುವಾಗ, 'ಗುಡ್... ಹೀಗೆ ಕಲಿ.. ಉಗ್ಗು ದೊಡ್ಡ ವಿಷಯವಲ್ಲ' ಎಂದು ಗಲ್ಲ ನೇವರಿಸಿದ್ದರು. ಅವರ ಹಾರೈಕೆಯಂತೆ ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲೂ ದ್ವಿತೀಯ ಸ್ಥಾನದ ಅಂಕಗಳು! 

 ಇಂದು ಫೋನಿಸಿದಾಗ ಹಳೆಯ ನೆನಪುಗಳು ರಾಚಿ ಬಂದು, ಸರ್. ಈಗ ಉಗ್ಗು ಕಡಿಮೆಯಾಗಿದೆ. ಸಲೀಸಾಗಿ ಮಾತನಾಡ್ತೇನೆ' ಎಂದು ಎರಡ್ಮೂರು ಬಾರಿ ಬಡಬಡಿಸಿದೆ. ನನಗರಿವಿಲ್ಲದೆ ಮಾತುಗಳು ಹೊರಹೊಮ್ಮಿದುವು. ಸುತ್ತ ಯಾರಿದ್ದಾರೆ ಎಂಬ ಪರಿವೆ ಇಲ್ಲದೆ! ಮನದೊಳಗೆ ಅವಿತುಕೊಂಡಿದ್ದ  ಭಾವವೊಂದು ಮಾತನಾಡಿದ ಪುಳಕ.

 ಇಂದು ಅವರಾಗಿಯೇ ತನ್ನ ಶಿಷ್ಯನನ್ನು ಹುಡುಕಿ ಮಾತನಾಡಿಸಿ ಖುಷಿಪಟ್ಟಾಗ ಗುರುವಿನಲ್ಲಿ ದೇವರನ್ನು ಕಂಡ ಅನುಭವವಾಯಿತು. ತುಂಬಾ ಖುಷಿಪಟ್ಟೆ. ಜತೆಗೆ ಉಗ್ಗಿನಿಂದಾಗಿ ಪಟ್ಟ ಪಾಡಿನ ದಿವಸಗಳ ನೆನಪುಗಳು ಎರಡು ಹನಿ ಕಣ್ಣೀರಾಗಿ ಜಿನುಗಿ ಕಪೋಲದಲ್ಲಿ ಇಳಿಯಿತು.

ನನ್ನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ  ಬದುಕಿನಲ್ಲಿ ಅಕ್ಷರ ಕಲಿಸಿದ ಕೃಷ್ಣಪ್ಪ ಮಾಸ್ತರ್ ಮತ್ತು ಶುದ್ದಾಂತಕರಣದ ನೇಮಿಚಂದ್ರ ದಿಬ್ಬದ್ ಮಾಸ್ಟ್ರು - ಇವರಿಬ್ಬರದು ಮರೆಯಲಾಗದ ವ್ಯಕ್ತಿತ್ವ. (ಬಹುದಿನಗಳಿಂದ ಇವರಿಬ್ಬರು ಆಗಾಗ್ಗೆ ನೆನಪಾಗುತ್ತಿದ್ದರು)

 

Thursday, August 20, 2020

'ಭಾವ' ಅರಳಿದಾಗ ಮೌನವಾದ ಮಾತು

                           ಜನ್ಮ ದಿನ (ಬರ್ತ್ ಡೇ) ಅಂದಾಗ ನೆನಪಾಗುವುದು 'ಕೇಕ್'. ಅದನ್ನು ತುಂಡರಿಸಿ, ಉರಿಸಿದ ದೀಪ ನಂದಿಸಿದಾಗ 'ಆಚರಣೆ'ಯಲ್ಲಿ ಖುಷಿಯ ಭಾವ. ಸಾರ್ಥಕ. ತುಂಡರಿಸುವುದರಲ್ಲಿ, ನಂದಿಸುವುದರಲ್ಲಿ ಆಯುಷ್ಯ ಇಳಿಲೆಕ್ಕಕ್ಕೆ ಜಾರುತ್ತಾ ಇರುತ್ತದೆ... 

                ಇರಲಿ.. ವಿಷಯ ಎಲ್ಲೋ ಹೋಯಿತು... ನಾನು 1990ರಲ್ಲಿ ಪುತ್ತೂರಿನಲ್ಲಿ ವೃತ್ತಿ ಬದುಕನ್ನು ಆರಂಭಿಸಿದೆ. ಆಗೊಮ್ಮೆ ತಾಳಮದ್ದಳೆಯಲ್ಲಿ ವೀಕ್ಷಕನಾಗಿ ಹೋಗಿದ್ದಾಗ ಪಿ.ಜಿ.ಜಗನ್ನಿವಾಸ ರಾವ್ ಪರಿಚಯ. ಆತ್ಮೀಯರಿಗೆ ಇವರು ಜಗ್ಗಣ್ಣ. ಅಂದೂ... ಈಗಲೂ... ಮುಂದೆಯೂ....

                ಮನೆ ಸುಳ್ಯದಾಚೆ... ವೃತ್ತಿ ಸುಳ್ಯದೀಚೆ.... ಆಗ ಚಂದು ಶೆಟ್ಟರ ಅಂಗಡಿಯ ಎದುರು ಜಗ್ಗಣ್ಣನ ಮನೆ.  ಅವರ ಅಮ್ಮ ಪುಷ್ಪಾವತಿ. ಅಣ್ಣ ಚಂದ್ರಶೇಖರ್. ನಂತರದ ದಿವಸಗಳಲ್ಲಿ ರಮೇಶ್ ಭಟ್ ಪುತ್ತೂರು, ರಮಾನಂದ ನೆಲ್ಲಿತ್ತಾಯ, ಗಂಗಾಧರ ಬೆಳ್ಳಾರೆ (ದಿ.), ಕನ್ಯಾನ ಕೇಶವ ಭಟ್ (ದಿ) ಮತ್ತು ಪರಮೇಶ್ವರ ಜೋಯಿಸ್, ರಾಮ ಜೋಯಿಸ್ ಬೆಳ್ಳಾರೆ..ಯವರು ಪ್ರವೃತ್ತಿಗಳಿಗೆ ಸಾಥ್ ಆದರು.

                ಎಷ್ಟೋ ಬಾರಿ ಕೂಟ, ಆಟ ಮುಗಿಸಿ ಪೆರಾಜೆಗೆ ಹೋಗಿ ಬರುವಷ್ಟು ಸಮಯವಿದ್ದಿರಲಿಲ್ಲ. ಸ್ನಾನ, ಕಾಫಿ, ಊಟ ಎಲ್ಲವೂ ಜಗ್ಗಣ್ಣನ ಮನೆಯಲ್ಲೇ. ಅವರ ಅಮ್ಮ ಮನೆಯ ಮಗನಂತೆ ಬಡಿಸಿ, ತಿನ್ನಿಸುತ್ತಿದ್ದ, ಉಣ್ಣಿಸುತ್ತಿದ್ದ ದಿನಮಾನಗಳು ಬದುಕಿನ ಮರೆಯದ ಕಾಲಘಟ್ಟ. ಇದು ಒಂದೆರಡು ದಿವಸವಲ್ಲ... ವರುಷಗಟ್ಟಲೆ...  ಬೇಸಿಗೆಯಲ್ಲಿ ವಾರಕ್ಕೆ ಎರಡು ದಿವಸ ಗ್ಯಾರಂಟಿ! ಒಂದು ವಾರ ಹೋಗಿಲ್ಲವಾದರೆ ಅಮ್ಮನಿಂದ ಬುಲಾವ್ ಬರುತ್ತಿತ್ತು! ಗಂಗಾಧರ ಬೆಳ್ಳಾರೆಯವರ ಹಾಸ್ಯ ಲಹರಿಗಳು ರಸಗವಳವಾಗಿತ್ತು. ನಂತರದ ದಿವಸಗಳಲ್ಲಿ ಜಗ್ಗಣ್ಣ ಬಪ್ಪಳಿಗೆಯ 'ಅಗ್ರಹಾರ'ದಲ್ಲಿ ನೆಲೆಯಾದರು.

                ಇದು ಪೀಠಿಕೆ.... ನಿನ್ನೆ (19-8-2020) ನನ್ನ ಹುಟ್ಟುಹಬ್ಬವನ್ನು ಫೇಸ್ ಬುಕ್ ಜ್ಞಾಪಿಸಿತು. (ನಿಜಕ್ಕೂ ದುರಂತ!) ಯಾರ ಹುಟ್ಟುಹಬ್ಬವೋ ಅವರು ಆಪ್ತರಿಗೆ ಸಿಹಿ ನೀಡುವುದು ರೂಢಿ... ಆದರೆ ನಿನ್ನೆ ಆದುದೇ ಬೇರೆ. ಸಂಜೆ ಜಗ್ಗಣ್ಣನ ಫೋನ್... ಅರ್ಜಂಟ್ ಕಾಲು ಗಂಟೆ ಮಾತಿಗೆ ಸಿಗಬೇಕು.. ಅವರು ಹಾಗೆನ್ನುವುದು ತೀರಾ ವಿರಳ. ಅವರ ಕಾರು ಅವರ ಮನೆಯತ್ತ ಮುಖ ಮಾಡಿದಾಗಲೂ ಅಲ್ಲಿ ಅರ್ಜಂಟಿನ ದುಗುಡ ಕಾಣಲಿಲ್ಲ! ಮನೆಯೊಳಗೆ ಕಾಲಿಟ್ಟಾಗಲೂ ಸುಳಿವೂ ಇದ್ದಿರಲಿಲ್ಲ. ಪೂರಿ, ಗಸಿ, ಸಿಹಿಯ ಸಮಾರಾಧನೆಯಾಯಿತು. ಉಭಯಕುಶಲೋಪರಿ, ಕೊರೋನಾ ವೃತ್ತಾಂತ, ಲೋಕದ ಸುದ್ದಿ ಮಾತನಾಡುವಾಗಲೂ 'ಅರ್ಜಂಟ್' ಇಣುಕಲಿಲ್ಲ! ಸರಿ, ಹೊಟ್ಟೆ ತುಂಬಿತು, ಇನ್ನೇನು ಹೊರಡಬೇಕು ಎಂದಾಗ ಮನೆಮಂದಿಯಿಂದ ಉಡುಗೊರೆಗಳ ಪ್ರದಾನ.

                ಬೆರಗಿನ ಕ್ಷಣ.. ಒಂದು ಕ್ಷಣ ಮಾತು ಮೌನಕ್ಕೆ ಜಾರಿತು.. ಇಂತಹ ಕ್ಷಣಗಳು ಮೊದಲೇ ತಿಳಿದಿರುತ್ತಿದ್ದರೆ  ಜಾರುತ್ತಿದ್ದೆ. ಇಲ್ಲಿ ಜಗ್ಗಣ್ಣ ಕುಟುಂಬದ ಪ್ರೀತಿಯಲ್ಲಿ ಬಂಧಿಯಾದೆ. ಅವರ ಪತ್ನಿ ವಿದ್ಯಾ, ಮಗಳು ವೈಷ್ಣವಿ, ಮಗ ಶ್ರೀಕೃಷ್ಣ ಇವರೆಲ್ಲರ ಸುಪ್ತ ಪ್ರೀತಿಯ ಅನಾವರಣಕ್ಕೆ ನನ್ನ ಹುಟ್ಟಹಬ್ಬದ ದಿನಾಂಕ ಸಾಕ್ಷಿಯಾಯಿತು.. ಅವರೆಲ್ಲರಿಗೂ ಶುಭಾಶಯಗಳು.

                ಹಿಂದೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆಯಾದಾಗ ಮನತುಂಬಿ ಖುಷಿಯನ್ನು ಹಂಚಿಕೊಂಡಿದ್ದರು. ತಮ್ಮ ಒತ್ತಡದ ಬದುಕಿನ ಮಧ್ಯೆ ಅರ್ಧ ದಿವಸ ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ಪತ್ರಿಕೆಗಳಲ್ಲಿ ಶುಭಾಶಯ ಕೋರಿದ್ದರು. ತಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳ ಯೋಜನೆ, ಯೋಚನೆಗಳಲ್ಲಿ ನನಗೊಂದು ಪ್ರತ್ಯೇಕವಾದ ಸ್ಥಾನವನ್ನು ನೀಡಿದ, ನೀಡುವ ಸುಪ್ತ ಮನಃಸ್ಥಿತಿ ಅವರದು.

                ನಿನ್ನೆ 'ಉಡುಗೊರೆ ನೀಡಿದ್ದಾರೆ' ಎನ್ನುವ ಕಾರಣಕ್ಕೆ ಅವರಿಗೆ ಅಭಿನಂದನೆ ಅಲ್ಲ. ಬದುಕಿನಲ್ಲಿ ಸ್ನೇಹಿತರು ಹಾದು ಹೋಗುತ್ತಲೇ ಇರುತ್ತಾರೆ. ಒಂದೊಂದು ನಿಲ್ದಾಣ ತಲಪುವಾಗ 'ತಮ್ಮ ಕೆಲಸವಾಯಿತು' ಎಂದು ಕೆಲವರು ತಪ್ಪಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಸೇರಿಕೊಳ್ಳುತ್ತಾರೆ.. ಕೆಲವೊಮ್ಮೆ 'ಸ್ನೇಹಿತರೆಂದು' ನಂಬಿದವರೇ 'ತಾನು ಸ್ನೇಹಿತ ಅಲ್ಲ' ಎಂದು ವರ್ತನೆಯಲ್ಲೇ ತೋರಿಬಿಡುತ್ತಾರೆ.. ಅದೂ ಒಳ್ಳೆಯದೇ...

  ಹಿನ್ನೆಲೆಯಲ್ಲಿ ಮೂವತ್ತು ವರುಷಗಳ ಬದುಕಿನಲ್ಲಿ ನಾನು, ಅವರು ಹಲವು ನಿಲ್ದಾಣಗಳಲ್ಲಿ ನಿಂತಿದ್ದೇವೆ.. ಸಾಗಿ ಬಂದ ಹಾದಿಯನ್ನು ಹಿಂತಿರುಗಿ ನೋಡಿದ್ದೇವೆ.. ಮತ್ತೆ ಮುಂದಿನ ನಿಲ್ದಾಣವನ್ನು ಆಯ್ಕೆ ಮಾಡಿಕೊಂಡಿದ್ದೇವೆ.. ಹಾಗಾಗಿ ಎಲ್ಲಾ ನಿಲ್ದಾಣಗಳ ಪರಿಚಯವು ಅನುಭವವಾಗಿ ಮನದೊಳಕ್ಕೆ ಇಳಿದ ಪರಿಣಾಮವೇ ಇರಬೇಕು... ಸ್ನೇಹ ಬಿರುಕು ಬಿಟ್ಟಿಲ್ಲ. ಅದರ ಕೊಂಡಿಗಳು ಕಳಚಿಲ್ಲ. ಕೆಲವೊಮ್ಮೆ ವೈಚಾರಿಕ ಕಾರ್ಮೋಡಗಳು ಆವರಿಸಿದ್ದುಂಟು. ಆದರೆ ಅದು ಅಷ್ಟೇ ವೇಗವಾಗಿ ತಿಳಿಯಾದುದುಂಟು.

                'ಥ್ಯಾಂಕ್, ಗ್ರೇಟ್, ಸೂಪರ್..' ಪದಗಳು ಢಾಳಾಗಿರುವ ಕಾಲಘಟ್ಟದಲ್ಲಿ ಸ್ನೇಹಕ್ಕೆ ಮಾನ ಕೊಟ್ಟ ಜಗ್ಗಣ್ಣನನ್ನು ಅಕ್ಷರಗಳ ಮೂಲಕ ಅಭಿನಂದಿಸುತ್ತೇನೆ... ಎಲ್ಲಾ ವಿಚಾರಗಳನ್ನು ಮುಖತಃ ಹೇಳುವುದು ಮುಜುಗರದ ಸಂಗತಿ.. ಅವರಿಗೆ ಕೂಡಾ..